ಪತ್ತೆದಾರಿ ಕತೆ
ನಾ ನು ಮೊದಲಿಂದಲೂ ಅಷ್ಟೇ, ತೀರಾ ಶೆರ್ಲಾಕ್ ಹೋಮ್ಸ್ನಷ್ಟಲ್ಲದಿದ್ದರೂ ಒಂದು ರೇಂಜಿಗೆ ಬೆಶ್ಟ್ ಪತ್ತೇದಾರ. ಸಣ್ಣಕಿದ್ದಾಗಲೇ ನಮ್ಮ ತೋಟದ ಮಂಡಗಾಲುವೆ ಬದಿಯ ಬಕ್ಕೇಮರಕ್ಕೆ ಬೆಳೆದಿದ್ದ ಬಕ್ಕೆ ಹಣ್ಣು ಕಾಣೆಯಾದಾಗ ನನ್ನ ಚಾಣಾಕ್ಷತನದಿಂದ ಕಳ್ಳನನ್ನು ಹಿಡಿದಿದ್ದೆ. ಹೆಂಗೆ ಅಂತೀರಾ? ಹೇಳಿದರೂ ನಿಮಗೆ ತಿಳಿಯಲಿಕ್ಕಿಲ್ಲ ಬಿಡಿ. ಹೋದ ತಿಂಗಳು ನಡೆದ ಕೊಲೆಯ ಆರೋಪಿಯನ್ನು ಪತ್ತೆ ಹಚ್ಚಿದ ಮೇಲಂತೂ ನನ್ನ ಪ್ರೊಫೆಶನನ್ನೇ ಬದಲಾಯಿಸಿ ಪೂರ್ಣಾವಧಿ ಪತ್ತೇದಾರಿಕೆ ಮಾಡಬೇಕೆಂದು ತೀರ್ಮಾನಿಸಿದ್ದೇನೆ. ಅದಕ್ಕೂ ಮೊದಲು ನಡೆದದ್ದೇನು ಅಂತ ಹೇಳಿ ನಿಮ್ಮ ಅಭಿಪ್ರಾಯವನ್ನೂ ಕೇಳೋಣ ಅಂದುಕೊಂಡೆ. (ನಿಮ್ಮ ಅಭಿಪ್ರಾಯ ನನ್ನ ತೀರ್ಮಾನವನ್ನು ಬದಲಾಯಿಸಲಾರದು. ನನ್ ಬದುಕು, ನನ್ ರೂಲ್ಸು. ಕೇಳೋಕ್ ನೀವ್ಯಾರು) ನಮ್ಮೂರು ಮೆರವಣಿಗೆ ಪಕ್ಕದ ಹಳ್ಳಿ. ಜಗತ್ತಿನಲ್ಲಿ ನಡೆವ ಎಲ್ಲಾ ಥರದ ಘಟನೆಗಳೂ ಮೆರವಣಿಗೆಯಲ್ಲಿ ನಡೀತವೆ. ಅದಕ್ಕೇ ಆ ಊರು ನಿಮಗೆ ಗೊತ್ತಿರಬಹುದು. ನಮ್ಮೂರು ಅಗ್ದಿ ಶಾಂತ, ಸೌಮ್ಯ, ಸಹಬಾಳ್ವೆಯ ಮಂದಿ ಬದುಕೋ ಊರು. ಹೊಳೆಗೆ ಬ್ರಿಜ್ ಇಲ್ಲ, ರಸ್ತೆಯಿಲ್ಲ. ಆದರೂ ಇಪ್ಪತ್ತಿಪ್ಪತ್ತೈದು ವರ್ಷದಿಂದ ವೋಟು ಒತ್ತಿದ್ದು ಮಾತ್ರ ಒಬ್ಬರಿಗೇ. ಕಾರಣ ಗೊತ್ತಲ್ಲ, ಆತ ಯಾರಿಗೂ ಕೆಟ್ಟದು ಮಾಡದ ಗೋವಿನಂಥಾ ಮನ್ಷ ಅಂತ. ನೋಡಿ, ಪತ್ತೇದಾರಿ ಕತೆ ಹೇಳೋನಿಗೆ ರಾಜಕೀಯ ಬೇರೆ ನೆನ್ಪಾಯ್ತು. ಅಲ್ಲ, ಯಾಕೆ ಆ ವಿಷ್ಯ ಬಂತು ಅಂದ್ರೆ, ನಮ್ಮೂರಿನ ಮಂದಿ ಅಗ್ದಿ ಶಾಂತ, ಸೌಮ್ಯ,