ಉಂಬಳ
ಸಣ್ಣಕಿದ್ದಾಗ ಕಂಡಿದ್ದಷ್ಟೇ ಭಯಂಕರ ಮಳೆಗಾಲವದು. ಮನೆಗೂ ತೋಟಕ್ಕೂ ಮಧ್ಯದ ಹಳ್ಳ ದಾಟಲು ಕಟ್ಟಿಕೊಂಡಿದ್ದ ಬ್ರಿಜ್ಜು ತೇಲಿಹೋಗುವಷ್ಟು ಮಳೆ ಬಂದಿತ್ತು ಅಂದ್ರೆ ಭಯಂಕರ ಅಂತಲೇ ಉದ್ಗಾರ ಹೊರಬರೋದು. ಅಂಥ ಭರ್ಜರಿ ಮಳೆಗಾಲದ ದಿನ ಮಂಜು ನಮ್ಮನೆಯತ್ತ ಬರುತ್ತಿದ್ದುದು ಟಾರಸಿಯ ಮೇಲೆ ಆರಾಮು ಕುರ್ಚಿ ಹಾಕಿ ಕುಂತಿದ್ದ ನಂಗೆ ಕಂಡಿತು. ದೂರದಿಂದಲೇ, ಬರುತ್ತಿರುವ ಮನುಷ್ಯ ಮಂಜು ಎಂದು ಗುರುತು ಹಿಡಿಯಬಲ್ಲ ರೂಪು ಅವನದ್ದು. ಮೊಣಕಾಲನ್ನು ಹೌದೋ ಅಲ್ಲವೋ ಎನ್ನುವಷ್ಟು ಮಾತ್ರ ಮಡಚಿ ನಡೆಯುವ ನಡಿಗೆಯ ಶೈಲಿಯೂ ಅವನಿಗಷ್ಟೇ ಒಲಿದ ಕಲೆಯಂತೆ ಅನಿಸೋದುಂಟು. ಉದ್ದ ದಂಟಿನ ಕಮಲಕಡ್ಡಿ ಕೊಡೆಯನ್ನು ಅದೆಲ್ಲಿಂದ ಹುಡುಕಿ ಕೊಂಡುಕೊಳ್ಳುತ್ತಾನೋ ಗೊತ್ತಿಲ್ಲ, ಬಟನ್ ಛತ್ರಿಗಳ ಕಾಲದಲ್ಲಿ ನನ್ನಂಥವರಿಗೆ nostalgia ಹುಟ್ಟಿಸುವಷ್ಟು ಟಿಪಿಕಲ್ ಆಸಾಮಿ ಈ ಮಂಜು. ಇಂಥ ಮಳೆಯಲ್ಲಿ ಹೊಳೆ ಹೆಂಗೆ ದಾಟಿದನೋ ಎಂಬ ಕುತೂಹಲದ ಸಂತಿಗೇ ಈಗ ಬರೋ ಅರ್ಜೆಂಟು ಏನಿತ್ತು ಅನ್ನೋ ಪ್ರಶ್ನೆಯೊಂದು ಮೂಡಿತ್ತು. ನಮ್ಮನೆಯತ್ತ ಬಂದವನ ನಡುಗೆ ನಿಧಾನವಾಗಿತ್ತು. ನಮ್ಮನೆಯತ್ತ ತಿರುಗುವ ಕಾಲುಹಾದಿಯಲ್ಲಿ ಮೂರೋ- ನಾಲ್ಕೋ ಹೆಜ್ಜೆಯಿಟ್ಟವ ದಾರಿ ಬದಲಿಸಿಬಿಟ್ಟ! ಬಹುಶಃ ನನ್ನನ್ನು ಗಮನಿಸಲಿಲ್ಲವೇನೋ. ಸ್ಟ್ಯಾಂಡು ಹುಗಿಯುತ್ತದೆಂದು ಬೈಕನ್ನು ಶೆಡ್ನಲ್ಲಿ ಇಡದೇ ಅಂಗಳದೊಳಕ್ಕೆ ತಂದು ಇಟ್ಟಿದ್ದೆ. ಬಹುಶಃ ಬೈಕು ಕಾಣದೇ ನಾನು ಮನೆಯಲ್ಲಿಲ್ಲ ಅಂದುಕೊಂಡು ಹೊಂಟನೇನೋ ಎಂದು, "ಕಡಿಗೋ