Posts

Showing posts from 2018

ನಾಯಿಮಳ್ಳ

ಮೊದಲು ನಾಯಿ ಮಳ್ಳ ಬಂದ. ಹೆಗಲಿಗೊಂದು ಜೋಳಿಗೆ, ಅದರಲ್ಲೊಂದು ನಾಯಿಮರಿ. ನರಪೇತಲ ನಾಯಿಯೊಂದು ಅವನ ಹಿಂದೆ. ಅದರ ಸಂಗಾತಿ ಮತ್ತೊಂದು ನಾಯಿ; ಕತ್ತಿಗೆ ಕಟ್ಟಿಸಿಕೊಂಡಿದ್ದ ಒಂದಂಗುಲ ದಪ್ಪದ ಸರಪಳಿಯ ಮತ್ತೊಂದು ತುದಿ ನಾಯಿಮಳ್ಳನ ಕೈಯಲ್ಲಿತ್ತು. "ಒಂದ್ ಕೆಂಪೀ ಹೆಣ್ ಕುನ್ನಿ ಒಂದ್ ಹೆಂಗ್ಸಿನ ಸಂತಿಗೆ ಬಂದಿತ್ತು. ಹೊಳೆ ಬುಡ್ಕೆ ಕಂಡಿತ್ತು. ಅದ್ಯಾರ್ ನಾಯೀನ್ರಾ? " ಅಂತ ಕೇಳಿದಾಗ ಅದು ಮಡಿವಾಳರ ಕೇರಿ ಚಂದ್ರನದ್ದೆಂದೂ, ಅವನ ಹೆಂಡತಿ ತಾರಾಳೊಟ್ಟಿಗೆ ಗದ್ದೆ ಕಡೆ ಬಂದಿತ್ತೆಂದೂ ಹೇಳಿದೆ. "ಚಂದ್ರನ ಮನೆ ಎಲ್ಲಿ?" ಎಂದು ಕೇಳಿದ್ದ. ಹಿಂಗೇ ಬೆಟ್ಟದ ಕೆಳಗೆ ಹಾವು ಹರಿದಂತೆ ಹೋಗಿರೋ ಕಾಲುಹಾದಿಯಲ್ಲಿ ನೆಟ್ಟಗೆ ಹೋದಾಗ ಸಿಗೋ ಮೂರನೇ ಮನೆಯೆಂದು ಹೇಳಿ ನನ್ನ ಬೈಕನ್ನು ತೊಳೆಯೋ ಕೆಲಸ ಮುಂದುವರಿಸಿದ್ದೆ.      ಮಾರನೇ ದಿನ ವಾಪಸ್ಸು ಕೆಲಸಕ್ಕೆ ಹಾಜರಿರಬೇಕಿತ್ತು. ಸಂಜೆ ಮನೆಗೆ ಬರೋವರೆಗೆ ದನಗಳಿಗೆ ತಿನ್ನಲು ಬೇಕಲ್ಲ, ಹೊಳೆಬದಿಯ ಹಾಳು ಗದ್ದೆಗೆ ಹೋಗಿ ಹಸಿ ಹುಲ್ಲು ಸವರುತ್ತಿದ್ದೆ. ಹುಲ್ಲು ಸವರುತ್ತಿದ್ದವನಿಗೆ ಈ ನಾಯಿ ಮಳ್ಳನದ್ದೇ ಯೋಚನೆ. ಭಯಂಕರ ಲವಲವಿಕೆಯ ಮನುಷ್ಯ. ಅದ್ಯಾಕೆ ಈ ಮಳ್ಳ ಮಳ್ಳನಾದನೋ ಗೊತ್ತಿಲ್ಲ, ಗೊತ್ತು ಮಾಡಿಕೊಳ್ಳುವ ಜರೂರತ್ತು ಇದೆ ಅನ್ನಿಸಿತು. ನಾನೂ ಶರತ್‌ಚಂದ್ರರ ದೇವದಾಸ್ ಓದಿದ್ದೆ. ಪಾರೋ ಸಿಗದೇ ನಾಯಿಗಳನ್ನೇ ಪತ್ನಿಯರಂತೆ ಸಾಕೋ ಕ್ಯಾರೆಕ್ಟರ್ರು ಪರಿಚಯವಿತ್ತು. ನಮ್ಮೂರಿನಲ್ಲೇ ತನಗೆ ನಟಿ ಮಂಜು

ಮುಳ್ಳಂದಿ ಅಂಬು ಮತ್ತು ಎಂಟು ತಿಂಗಳು

“ಇಲ್ಲಿಯ ಅಡಿಕೆಗೊನೆಗಳಿಗೆ ಚೌಡೇಶ್ವರಿಯ ಕಾವಲಿದೆ. ತೋಟದ ತುದಿಯ ವಾಟೆಮಟ್ಟಿಗೆ ಹೊಕ್ಕಿದ ಹೆಂಗಸರಿಗೆ ಯಾವ ಕಾವಲೂ ಇಲ್ಲ." ಹೀಗೆ ಎರಡು ವಾಕ್ಯಗಳನ್ನು ಓದಿಸುತ್ತಿತ್ತು ಆ ತಂತಿ ಬೇಲಿಯ ಅಂಚಿನ ಅಡಿಕೆ ಮರಕ್ಕೆ ತೂಗುಬಿಟ್ಟಿದ್ದ ಒಂದು ಚದರಡಿಯ ಬೋರ್ಡು. ರಾಮ ಎದುರುಸಿರು ಬಿಟ್ಟುಕೊಂಡು ಬಂದಾಗ ವಿಷಯದ ಗಾಂಭೀರ್ಯತೆ ಇಷ್ಟಿರಬಹುದು ಎಂಬ ನಿರೀಕ್ಷೆಯಿದ್ದಿರಲಿಲ್ಲ. ಒಂದು ಉದ್ದನೆಯ ಉಸಿರ ಒಳಗೆಳೆದು ಬಿಟ್ಟ ಮಂಜ್ನಾಥ ಹೆಗಡೆ. ಹಿಂದೆಯೇ “ಅದ್ರಜ್ಜಿಕುಟಾ" ಎಂಬ ಉದ್ಗಾರ, ತುಸು ಕೋಪದಿಂದೆಂಬಂತೆ. ‘ಗಂಗಾ...’ ಸೊಪ್ಪಿನ ಬೆಟ್ಟದಲ್ಲಿ ರಾಮನ ಕೂಗು ಮೊಳಗಿದಾಗ ಕರೆಯ ಉದ್ದೇಶ ಸ್ಪಷ್ಟವಾಗಿತ್ತು. ಉದ್ದ ತೋಳಿನ ಗಂಡಸರ ಅಂಗಿ, ಸೊಂಟಕ್ಕೊಂದು ಸವಕಲು ಟುವಾಲು ಸುತ್ತುಕೊಂಡಿದ್ದ ಕಪ್ಪುಗಂಗಳ ಗಂಗಾ ನೀರಿನ ಉಗ್ಗ ಇಟ್ಟಿದ್ದ ಹೊನ್ನೆಮರದ ಬುಡದತ್ತ ಹೊಂಟಳು. ಮರದ ಹೆಣೆಗಳ ಜೊತೆ ಕತ್ತಿಗಳ ಗುದ್ದಾಟದ ಸದ್ದು ಆಲಿಸಿ, ಹಿಂಬಾಲಿಸಿ ರಾಮ ಬೆಟ್ಟ ತಲುಪಿದ್ದ. “ಹಗೀರ್ ಮನಿ ಕೆಲ್ಸನೂ ಸಾಕು, ಕಿತ್ರಾಬಿದ್ ಓಡೂದೂ ಸಾಕು", ರಾಮ ಗೊಣಗಿಕೊಂಡ. “ಎಂತಕ್ಕೆ ಕರ್ದೆ?" ಗಂಗಾಳ ನೇರ ಪ್ರಶ್ನೆ, ಹಾಯಗದ ಎಲೆಗೆ ಬಳಿದಿದ್ದ ಬೆಲ್ಲವ ಖಾಲಿ ಮಾಡುತ್ತಾ ಹೊರಬಂತು. “ಮಂಜ್ನಾತೆಗ್ಡ್ರು ಕರೀತವ್ರೆ, ಬ್ಯಾಗ್ ಬರೂಕಂದ್ರು", ರಾಮ ಬಂದ ಕೆಲಸ ಮುಗಿಸಿದ. “ಈಗಾಗೂದಿಲ್ಲಾ, ಭಟ್ರ್ ಸೊಪ್ ಕಡಿಬೋಕು" ಅಂದು ಗಂಡಾಳುಗಳು ಮರಹತ್ತಿ ಕಡಿದು ಕೆಡಗಿದ್ದ ಭಾ