ಅನಾಥಪ್ರಜ್ಞೆ
ಕು ತ್ತಿಗೆಯ ನೆರಿಗೆಗಳನ್ನು ಲೆಕ್ಕ ಹಾಕಿದರೆ ಅರವತ್ತರ ಮೇಲೆ ದಾಟಬಹುದೇನೋ. ಅಜಮಾಸು ಅಷ್ಟೇ ವಯಸ್ಸಾದ ಅಜ್ಜಿಯವಳು. ಟಿವಿ ಕಪಾಟಿನ ಡ್ರಾವರಿಗೆ ಬೀಗ ಜಡಿದೂ ಮತ್ತೆ ಮತ್ತೆ ಭದ್ರತೆಯ ತಪಾಸಣೆ ಮಾಡುವಷ್ಟು ಅಭದ್ರತೆ ಅವಳನ್ನ ಕಾಡುತ್ತಿತ್ತು. ಅದರಲ್ಲಿ ಅಬ್ಬಬ್ಬಾ ಅಂದರೆ ಯಾವುದೋ ಕಾಲದ ತರಂಗವೋ, ಸುಧಾ ಮ್ಯಾಗಜೀನೋ ಇರಬಹುದಷ್ಟೇ! ಚಿಕ್ಕ ಚಿಕ್ಕ ವಸ್ತುಗಳೂ ತನಗೆ ನಿಽಯಷ್ಟೇ ಮುಖ್ಯ ಎಂಬಂತೆ ಜತನದಿಂದ ಕಾಯ್ದುಕೊಳ್ಳುವ ಅಭ್ಯಾಸ ಆಕೆಗೆ ಇತ್ತೀಚೆಗಷ್ಟೇ ಶುರುವಾದದ್ದು; ಇರದ ಮಕ್ಕಳನ್ನು ಇವಳಿಗೆ ಬಿಟ್ಟು ಗಂಡನೂ ಹರನ ಪಾದ ಸೇರಿದಾಗಿನಿಂದ... ಗಡಿಹನಿ ಹತ್ತುವ ವೇಳೆಗೆಲ್ಲ ಊರ ಉಳಿದ ಮಂದಿ ಬಾಳೆಹೆಡೆ ಮಾಡಿ ಅಡಿಕೆಗೊನೆಗಳಿಗೆ ತುತ್ತ-ಸುಣ್ಣವನ್ನೋ, ಬಯೋಪಾಯ್ಟನ್ನೋ ಹೊಡೆಯಲು ತಯಾರಾಗುತ್ತಿದ್ದರೆ ಸಾವಿತ್ರಜ್ಜಿ ಬೆಳೆಸಾಲಕ್ಕೆ ಅರ್ಜಿ ಹಾಕುವುದೂ ಬಗೆಹರಿಯದೆ, ಕೊನೆಗೌಡನ ಹುಡುಕಾಟವೂ ಕೊನೆಗಾಣದೆ ಹೇಡಿಗೆಯ ಮೇಲೆ ಕುಂತು ಸೆರಗಿನ ತುದಿಯಲ್ಲಿ ಗಾಳಿ ಬೀಸಿಕೊಳ್ಳುತ್ತಿದ್ದಳು. ಇಂಥ ದಿನಗಳು ಶುರುವಾಗಿದ್ದು ಎಲ್ಲಿಂದ? ಪ್ರಶ್ನೆಯಾಗಿ ನೆನಪುಗಳು ಬರುತ್ತಿದ್ದರೆ ಗಾಳಿ ಬೀಸುತ್ತಿದ್ದ ಸೆರಗೂ ನಿಷ್ಕ್ರಿಯವಾಗಿತ್ತು. ಮೊಗೆ ಓಳಿಗೆ ನೀರು ಹೊಯ್ಯಲು ಹೋಗಿದ್ದ ಮಗ ಥಿಮೇಟು ಕರಡಿ ಕುಡಿದಿದ್ದು, ಬಯಲುಸೀಮೆಯ ಸೊಸೆ ಮಲೆನಾಡ ಕೃಷಿ-ಬದುಕಿಗೆ ಒಗ್ಗದೇ ತನ್ನ ಮಗಳೊಟ್ಟಿಗೆ ತವರಿಗೆ ಹೋಗಿದ್ದು, ಇದ್ದೊಬ್ಬ ಗಂಡನೆಂಬ ಪ್ರಾಣಿ ಸಂಭಾವನೆಯ ಆಸೆಗೆ ಮನೆಯ ಜವಾಬ್ದಾರಿ ತೊರೆದು ಊರೂ